ಅಂದು ಎಪ್ರಿಲ್ ೧೨.... ಸೋಮವಾರ ಬೆಳಿಗ್ಗೆ- ೫.೩೦..... ಲಘುಬಗೆಯಿಂದ ಎದ್ದು, ತಣ್ಣೀರ ಆಪೋಶಣೆ ಮಾಡಿ, ಅಗತ್ಯವಿದ್ದ ಸಾಮಗ್ರಿಗಳನ್ನು ತುಂಬಿಸಿಕೊಂಡು ೧೭ ಜನರ ನಮ್ಮ ತಂಡ ಒಂದೆಡೆ ಸೇರಿದೆವು. ಅನಿವಾರ್ಯ ಕಾರಣಗಳಿಂದ ೭.೩೦ ಕ್ಕೆ ಬೆಳಗಾವಿಯನ್ನು ಸೇರಬೇಕಿದ್ದ ನಾವು, ಧಾರವಾಡ ಬಿಡಲು ಅಷ್ಟು ಹೊತ್ತಾಯಿತು. ದಾರಿಯಲ್ಲೆಲ್ಲಾ ಅಂತ್ಯಾಕ್ಷರಿಯ ಚಿಲಿಪಿಲಿ.
ಬೆಳಗಾವಿ ಸೇರಿದೊಡನೆ, ನಮಗಾಗಿ ಕಾಯುತ್ತಿದ್ದ ವಾಹನದಲ್ಲಿ ನಮ್ಮ ಪ್ರಯಾಣ ಆರಂಭ. ಅದರಲ್ಲಿ ಆಸೀನರಾದ ನಂತರ ಜಾಂಬೋತಿಯೆಡೆ ನಮ್ಮ ಗಾಡಿ ಸಾಗಿತು. ಬೆಳಗಾವಿಯಿಂದ ಜಾಂಬೋತಿಯವರೆಗೆ ದಾರಿ ಸುಗಮವಾಗಿತ್ತು. ಅದು ಘಟ್ಟಗಳಿಂದ ಕೂಡಿದ ಪ್ರದೇಶ. ಜಾಂಬೋತಿ ಸೇರುವವರೆಗು ನಾವೆಲ್ಲ "ಡಂಬ್ ಶರಾಡ್ಸ್" (!!!) ಆಡುತ್ತ ಸಮಯದ ಸದುಪಯೋಗ ಮಾಡುತ್ತಿದ್ದೆವು. ಜಾಂಬೋತಿ ತಲುಪಿದೊಡನೆ ಎಲ್ಲರ ಬಾಯಿಗು ಬೀಗ. ಚುರುಕ್ಕೆನ್ನುತ್ತಿದ್ದ ಹೊಟ್ಟೆಯ ಹತಾಶೆಯನ್ನು ತಣಿಸಿ,ನಮ್ಮ ಪ್ರಯಾಣವು "ವಜ್ರ"ದೆಡೆ ಸಾಗಿತ್ತು.
ಅಲ್ಲಿಂದ ಮುಂದೆ ಮಣ್ಣಿನ ರಸ್ತೆ. ಏರು ತಗ್ಗಾದ ದಾರಿಗಳು. ರಸ್ತೆಯಿಂದ ಬರುತ್ತಿದ್ದ ಧೂಳು, ನಮ್ಮ ಆಟವನ್ನು ಮಣ್ಣು ಪಾಲು ಮಾಡಿತ್ತು. ಇನ್ನು ವಾಹನವು ಮುಂದೆ ಹೋಗಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದಾಗ ಕಾಲಿನ ಮೊರೆ ಹೋಗುವುದು ಅನಿವಾರ್ಯವಾಗಿತ್ತು.
ಅದು ಬಹಳ ಇಡಿದಾದ ದಾರಿ. ಕೈಯಲ್ಲಿ ಊರುಗೋಲನ್ನು ಹಿಡಿದು ಚಾರಣವನ್ನು ಪ್ರಾರಂಭಿಸಿದೆವು. ಮಧ್ಯ ಮಧ್ಯದಲ್ಲಿ, ಫೋಟೊ ಪೋಸ್ ಕೊಡುತ್ತ, ಒಬ್ಬರಿಗೊಬ್ಬರು ಛೇಡಿಸುತ್ತ, ಕೆರಳಿಸುತ್ತ ಇರುವೆಯ ಸಾಲಿನಂತೆ ಸಾಗುತ್ತಿತ್ತು ನಮ್ಮ ಸಾಲು. ಮುಂದೆ ಯಾರೊಬ್ಬರು ನಿಂತರೂ ಹಿಂದೆ ಎಲ್ಲರೂ ನಿಲ್ಲಲೇ ಬೇಕದ ಪರಿಸ್ಥಿತಿ. ಹಾಗೆಯೇ ಸುಮಾರು ಒಂದೂವರೆ ಕಿಲೋಮಿಟರ್ ನಡೆದ ನಂತರ ನೀರಿನ ಜುಳುಜುಳು ಶಬ್ದ ಕಿವಿಗೆ ಬೀಳತೊಡಗಿತು. ಸುಸ್ತಾಗಿದ್ದ ಶರೀರಗಳು ಒಮ್ಮೆಲೇ ಚುರುಕುಗೊಂಡವು. ಅಲ್ಲಿಂದ ಅರ್ಧ ಕಿಲೋಮಿಟರ್ ನಡೆದ ನಂತರ ನೀರಿನ ಝರಿಯು ಗೋಚರಿಸಿತು. ಅಬ್ಬಾ!! ಬಂತಲ್ಲಾ ಎಂದು ಮನಸ್ಸಿಗೆ ಸಮಾಧಾನ. ಅಲ್ಲಿ ಮುಖಕ್ಕೆಲ್ಲ ನೀರನ್ನು ಚಿಮ್ಮಿಸಿಕೊಂಡು ಕುಳಿತುಕೊಳ್ಳುವಾಗ ತಿಳಿಯಿತು, ಇನ್ನು ಅರ್ಧ ದಾರಿಯನ್ನಷ್ಟೇ ಕ್ರಮಿಸಿದ್ದೇವೆಂದು.
ಮತ್ತೊಮ್ಮೆ ದಣಿವಾರಿದ ದೇಹದಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತ, ಚಾರಣವನ್ನು ಮುಂದುವರೆಸಿದೆವು. ಅಲ್ಲಿಂದ ಮುಂದೆ ನದಿಯ ದಡದಲ್ಲೇ ಪ್ರಯಾಣ. ಮನಸ್ಸಿಗೆ ಹಿತ ನೀಡುವ ಜುಳುಜುಳು ನದಿ, ತಂಪಾದ ನೀರು, ಅಲ್ಲಲ್ಲಿ ಈಜುವ ಮೀನುಗಳು.... ಹಾದಿ ಎಷ್ಟು ಸುಂದರವಾಗಿತ್ತೋ ಅಷ್ಟೆ ಭಯಂಕರವಾಗಿಯೂ ಇತ್ತು. ಕೊರೆಯುವ ಬಂಡೆಕಲ್ಲುಗಳು, ಕಲ್ಲಿನ ಕೊರಕುಗಳಲ್ಲಿರಬಹುದಾದ ಹಾವು ಛೇಳುಗಳ ಭಯ, ಸಮತಟ್ಟಾಗಿರದ ಹಾದಿ. ಕೆಲವೊಮ್ಮೆ ಬಿದ್ದ ಮರದ ದಿಬ್ಬಗಳ ಮೇಲೊ, ಕಲ್ಲುಗಳ ಮೇಲೋ ಹತ್ತಿ, ಇಳಿದೋ ಹೋಗಬೇಕಾದ ಪರಿಸ್ಥಿತಿ. ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ಅತ್ತ- ಇತ್ತ ಇಳಿಯುತ್ತ- ಹತ್ತುತ್ತ, ಅಂತೂ ಇನ್ನೇನು ಉಸಿರು ನಿಲ್ಲುತ್ತದೆಯೇನೋ ಎಂಬಂತ ಹೊತ್ತಿನಲ್ಲಿ ಕಂಡಿತು ದೊಡ್ಡದಾದ ಬಂಡೆ, ಅದರ ಹಿಂದೆಯೇ ದಬ ದಬ ಶಬ್ದ.
ಅಂದು ಆ ಸಮಯದಲ್ಲಿ ಮನಸ್ಸಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಏನೋ ಒಂದು ಸಾಧಿಸಿದ ಅನುಭವವಾಗಿತ್ತು. ಹಾಲಿನ ನೊರೆಯಷ್ಟು ಬಿಳುಪಾಗಿದ್ದ ಜಲಧಾರೆ ಧುಮ್ಮಿಕ್ಕುತ್ತ, ಪ್ರಪಾತಕ್ಕೆ ಅಪ್ಪಳಿಸುತ್ತಿತ್ತು. ಕಣ್ಣಿಗೆ ಕುಕ್ಕುವಂತಿದ್ದ ಆ ಜಲರಾಶಿಯ ಸೌಂದರ್ಯ, ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ.
ಅಲ್ಲಿನ ವಾತಾವರಣದ ಸೌಂದರ್ಯವನ್ನು ಸವಿಯುತ್ತ, ಹಲವು ಕುರುಕುರು ತಿಂಡಿಗಳನ್ನು ಹಲ್ಲಿನ ಗಿರಣಿಯಲ್ಲಿ ಹುಡಿಯಾಗಿದ್ದವು. ಹೊರಗಿನ ಪ್ರಪಂಚವನ್ನೇ ಮರೆತ ಅನುಭವ ಅಂದು ನಮಗಾಗಿತ್ತು. ಮನಸ್ಸು ಇನ್ನೂ ಆ ಜಾಗದ ಆಸರೆಯನ್ನು ಬಯಸುತ್ತಿದ್ದರೂ, ಉರುಳುತ್ತಿದ್ದ ಸಮಯ ನಮ್ಮ ಆಸೆಗೆ ಅಡ್ಡಗಾಲು ಹಾಕಿತ್ತು. ಅಂತೆಯೇ ಅಲ್ಲಿಂದ ಮರಳಿ ನಡೆಯಲು ಆರಂಭಿಸಿದೆವು.
ನೈಜ ಸೊಬಗಲ್ಲಿ ದಣಿವಾರಿಸಿಕೊಂಡಿದ್ದರಿಂದ ಅಷ್ಟೊಂದು ಆಯಾಸವೆನಿಸುತ್ತಿರಲಿಲ್ಲ. ಅಲ್ಲಿಯೇ ಮಧ್ಯದಲ್ಲಿ ಆಡಿದ್ದ ನೀರಾಟ ಆಯಾಸವನ್ನು ಆಹ್ಲಾದಗೊಳಿಸಿತ್ತು. ಆದರೆ ಅದು ಬಹಳ ಕಾಲ ಉಳಿಯಲಿಲ್ಲ. ಇಡಿದಾದ ಏರಿಕೆಯಲ್ಲಿದ್ದ ಬೆಟ್ಟವನ್ನು ನೋಡಿ ಎಲ್ಲರೂ ಗಾಭರಿಗೊಂಡಿದ್ದರು. ಖಾಲಿಯಾಗಿದ್ದ ನೀರು, ತಿಂಡಿಯ ಶೇಖರಣೆಗಳು ನಮ್ಮ ಕಷ್ಟವನ್ನು ಹೆಚ್ಚಿಸಿದ್ದವು. ಯಾರಿಗೂ ಮಾತನಾಡುವ ಶಕ್ತಿ ಇರಲಿಲ್ಲ. ವಾಹನವಿರುವವರೆಗೆ ಹೋಗಿ ಮುಟ್ಟುತ್ತೇವೆಂಬ ನಂಬಿಕೆಯೂ ಇರಲಿಲ್ಲ. ಅಂತೂ ನಡೆದೂ, ನಡೆದು ಕೊನೆಯಲ್ಲಿ ಬಂದು ಮುಟ್ಟಿದೆವು. ಒಂದು ರೀತಿಯಲ್ಲಿ, ಹೋದ ಜೀವ ಮರಳಿ ಬಂದಂತಾಗಿತ್ತು.
ವಾಹನವನ್ನೇರಿ, ಮರಳಿ ಜಾಂಬೋತಿಯೆಡೆ ಪ್ರಯಾಣ ಬೆಳೆಸಿದೆವು. ಹಲವರು ನಿದ್ರಿಸುತ್ತಿದ್ದರೆ, ಉಳಿದವರು ಸುಮ್ಮನೆ ಕುಳಿತಿದ್ದರು. ಸುಮಾರು ೮-೧೦ ಕೀ.ಮೀ. ನಡೆದ ನಮಗೆ ಹೊಟ್ಟೆಯು ತನ್ನ ಇರುವಿಕೆಯನ್ನು ಹೇಳುತ್ತಿತ್ತು. ಜಾಂಬೋತಿಯಲ್ಲಿ ಹೊಟ್ಟೆಗೆ ಆಹಾರವು ಬಿದ್ದ ನಂತರ ಮತ್ತೆ ಉತ್ಸಾಹ ಮರುಕಳಿಸಿತ್ತು. ಅಲ್ಲಿಂದ ಮತ್ತೆ ಹಾಡುತ್ತ, ನಗುತ್ತ ಬೆಳಗಾವಿಯೆಡೆ ಸಾಗಿದೆವು.ಬೆಳಗಾವಿ ಸೇರಿದ ನಂತರ ಹಲವರ ಇಷ್ಟದ ಮೇರೆಗೆ ಸುಂದರವಾದ ಸರೋವರದಲ್ಲಿ ದೋಣಿ ವಿಹಾರವನ್ನು ನಡೆಸಿದೆವು. ಹೀಗೆಯೆ ಹಲವು ನೆನಪುಗಳನ್ನು, ಖುಷಿಗಳನ್ನು ಹೊತ್ತು, ನಮ್ಮ ಗಾಡಿ ಧಾರವಾಡದೆಡೆಗೆ ಸಾಗಿತ್ತು.
ಹೀಗಿತ್ತು ನಮ್ಮ ಅಂದಿನ, ಆ ಮರೆಯಲಾಗದ ಚಾರಣ.
ಆ ಎಲ್ಲಾ ನೆನಪುಗಳನ್ನ ನನಗಾಗಿ ಕಟ್ಟಿಕೊಟ್ಟ ಸ್ನೇಹಿತರಿಗೆ ’ಚೀಯರ್ಸ್’ ಹೇಳುತ್ತ
- ಕಾವ್ಯ